ಮುಲ್ಕಿ: ಮಂಗಳೂರು ಹೊರವಲಯದ ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ 66 ರ ವಿವಾದಿತ ಎನ್ಐಟಿಕೆ ಅಕ್ರಮ ಟೋಲ್ ವಿರುದ್ಧ ಸೆಪ್ಟೆಂಬರ್ 13ರಂದು ನಡೆಯುವ ಸಾಮೂಹಿಕ ಪ್ರತಿಭಟನಾ ಧರಣಿಯನ್ನು ಒಗ್ಗಟ್ಟಾಗಿ ಯಶಸ್ವಿಗೊಳಿಸಬೇಕು ಎಂದು ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿದರು.
ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆದ ಟೋಲ್ ವಿರೋಧಿ ಹೋರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು “ಟೋಲ್ ಮಾಫಿಯಾದಲ್ಲಿ ಸಂಸದರು ಶಾಸಕರು ಸಹಿತ ಬಿಜೆಪಿ ನಾಯಕರು ಭಾಗಿಯಾಗಿದ್ದು 40% ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ.
ಇದರಿಂದಾಗಿ ಟೋಲ್ ತೆರವಿಗೆ ಮೌನವಹಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇನ್ನು ಸೆ. 13ಕ್ಕೆ ಟೋಲ್ ಬಳಿ ಪಕ್ಷಾತೀತವಾಗಿ “ಸುರತ್ಕಲ್ ಅಕ್ರಮ ಟೋಲ್ ತೆರವಿಗೆ ದಿನಾಂಕ ಘೋಷಿಸಿ”ಎಂಬ ಬೇಡಿಕೆ ಮುಂದಿಟ್ಟು ಸಾಮೂಹಿಕ ಪ್ರತಿಭಟನೆ ನಡೆಯಲಿದ್ದು ಸಂಬಂಧಪಟ್ಟವರು ಟೋಲ್ ರದ್ದುಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಬೇಕು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವ ಮೂಲಕ ಹೋರಾಟಗಾರರೇ ತೀರ್ಮಾನ ಕೈಗೊಂಡು ಟೋಲ್ ಮುಚ್ಚಿಸಿ ಜೈಲ್ ಹೋಗಲು ಸಿದ್ದ ಎಂದು ಎಚ್ಚರಿಕೆ ನೀಡಿದರು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ ಅನಧಿಕೃತ ಟೋಲ್ ತೆರವು ಬಗ್ಗೆ ಸಂಬಂಧಪಟ್ಟ ಆಡಳಿತ ಮೀನ ಮೇಷ ಎಣಿಸುತ್ತಿದ್ದು ಯಾವುದೇ ಮೂಲಭೂತ ಸೌಕರ್ಯವಿಲ್ಲದ ಅಕ್ರಮ ಟೋಲ್ ಕೂಡಲೇ ಮುಚ್ಚಬೇಕು,
ಟೋಲ್ ವಿರೋಧಿ ಹೋರಾಟಗಾರರ ಧ್ವನಿಯನ್ನು ಅಡಗಿಸುವ ಯತ್ನ ಮಾಡಲಾಗುತ್ತಿದೆ ಇದಕ್ಕೆಲ್ಲ ನಾವು ಬಗ್ಗುವುದಿಲ್ಲ, ನಮ್ಮ ಹೋರಾಟ ನಿರಂತರವಾಗಿದೆ ಎಂದರು.