ಉಳ್ಳಾಲ : ಕಗ್ಗತ್ತಲು ಆವರಿಸಿದ 500 ಮೀ ಉದ್ದದ ನಿರ್ಜನ ಪ್ರದೇಶದ ದಾರಿಯಲ್ಲಿ ಮೊಬೈಲ್ ಟಾರ್ಚ್ ಹಿಡಿದುಕೊಂಡೇ ವಿದ್ಯಾರ್ಥಿನಿಯರ ಪ್ರಯಾಣ, ಕೆಂಪು ತೈಲ ಮಿಶ್ರಿತ ಹಾಸ್ಟೆಲ್ ಬಾವಿ ನೀರು, ವಠಾರವಿಡೀ ತುಂಬಿದ ಶೌಚಾಲಯದ ಹೊಂಡದ ನೀರು, ಬಸ್ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿನಿಯರ ನರಕಯಾತನೆ.
ಇದು ಕೋಟೆಕಾರು ಪಟ್ಟಣ ಪಂಚಾಯತ್ವ್ಯಾಪ್ತಿಯ 11ನೇ ವಾರ್ಡಿನ ಮಡ್ಯಾರ್ ಭಾಗದಲ್ಲಿ ಒಂದು ವರ್ಷದ ಹಿಂದೆ ನಿರ್ಮಾಣವಾದ ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ ಶ್ರೀಮತಿ ಇಂದಿರಾಗಾಂಧಿ ಮಹಿಳಾ ನರ್ಸಿಂಗ್ ವಿದ್ಯಾರ್ಥಿನಿ ನಿಲಯದ 250 ವಿದ್ಯಾರ್ಥಿನಿಯರ ಕಥೆ ವ್ಯಥೆ.
ಮಡ್ಯಾರ್ ಪೌರ್ಣಮಿ ಗ್ಲಾಸ್ ಹೌಸ್ ಬಳಿ ಮುಖ್ಯ ರಸ್ತೆಯಲ್ಲಿ ಬಸ್ಸಿನಿಂದ ಇಳಿಯುವ ವಿದ್ಯಾರ್ಥಿನಿಯರು 500 ಮೀ. ದೂರದಲ್ಲಿರುವ ಹಾಸ್ಟೆಲ್ಗೆ ನಡೆದುಕೊಂಡೇ ಹೋಗ ಬೇಕಿದೆ.
ಸಂಜೆ 6.30 ಬಳಿಕ ಬರುವ ವಿದ್ಯಾರ್ಥಿನಿಯರು ನಿರ್ಜನವಾಗಿರುವ ರಸ್ತೆಯುದ್ದಕ್ಕೂ ಮೊಬೈಲ್ ಟಾರ್ಚ್ ಹಿಡಿದುಕೊಂಡು, ಆತಂಕದಿಂದಲೇ ನಿಲಯ ತಲುಪ ಬೇಕಿದೆ.
ಮಡ್ಯಾರ್ ನಿರ್ಜನ ಪ್ರದೇಶದಲ್ಲಿ 2022ರ ಜ.24 ರಂದು ಈ ಹಾಸ್ಟೆಲನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಚಿವ ಅಂಗಾರ, ಶಾಸಕ ಯು.ಟಿ ಖಾದರ್ ಉಪಸ್ಥಿತಿಯಲ್ಲಿ ಉದ್ಘಾಟಿಸಿದ್ದರು.
ಎರಡು ಹಾಸ್ಟೆಲ್ಕಟ್ಟಡಗಳಲ್ಲಿ 250ಕ್ಕೂ ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಅವರೆಲ್ಲ ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಮತ್ತು ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವವರು.
ಮಂಗಳೂರಿನಿಂದ 19 ಕಿ.ಮೀ ಹಾಗೂ ಕೊಣಾಜೆಯಿಂದ 8 ಕಿ.ಮೀ ವರೆಗೆ ವಿದ್ಯಾರ್ಥಿನಿಯರು ಪ್ರಯಾಣಿಸ ಬೇಕಿದೆ.
ಆದರೆ ಮಡ್ಯಾರ್ ಪ್ರದೇಶಕ್ಕೆ ಬೆರಳೆಣಿಕೆಯ ಬಸ್ಸುಗಳು ಮಾತ್ರ ಇದ್ದು, ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿನಿಯರು ಕಾಲೇಜಾಗಲಿ, ವಿದ್ಯಾರ್ಥಿ ನಿಲಯವನ್ನಾಗಲಿ ತಲುಪಲು ಸಾಧ್ಯವಾಗುತ್ತಿಲ್ಲ.
ಮುಖ್ಯ ರಸ್ತೆಯಿಂದ ವಿದ್ಯಾರ್ಥಿನಿ ನಿಲಯದವರೆಗೆ 18 ವಿದ್ಯುತ್ ಕಂಬಗಳಿದ್ದು ಒಂದರಲ್ಲಿಯೂ ದಾರಿ ದೀಪವಿಲ್ಲ. ನಿಲಯದ ಒಳಗಿನ ಬಾವಿಯ ನೀರು ಸಂಪೂರ್ಣ ತೈಲಮಿಶ್ರಿತವಾಗಿದೆ.
ಕೆಂಪು ಬಣ್ಣಕ್ಕೆ ತಿರುಗಿರುವ ನೀರನ್ನು ಸ್ಥಳೀಯ ಕೌನ್ಸಿಲರ್ ಹರೀಶ್ ರಾವ್ ಮಡ್ಯಾರ್ ನೇತೃತ್ವದಲ್ಲಿ ಲ್ಯಾಬೊರೇಟರಿಗೆ ಪರೀಕ್ಷೆಗಾಗಿ ಕಳುಹಿ ಸಿದಾಗ ನೀರಿನಲ್ಲಿ ಅಧಿಕ ಖನಿಜ ಅಂಶ ಇರುವುದರಿಂದ ಕುಡಿಯಲು ಯೋಗ್ಯವಲ್ಲ ಎನ್ನುವ ವರದಿ ಲಭಿಸಿದೆ.
ಆದರೂ ವಿದ್ಯಾರ್ಥಿನಿಯರು ಅದೇ ನೀರು ಕುಡಿದು ದಿನ ಕಳೆಯ ಬೇಕಿದೆ. ಇನ್ನೊಂದೆಡೆ ಆವರಣದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಿಸಿದ್ದರೂ, ಅದರ ನಿರ್ವಹಣೆ ಅಸಮರ್ಪಕವಾಗಿದ್ದು, ಕೊಳಚೆ ನೀರು ತುಂಬಿ ತುಳುಕಿ ಸ್ಥಳೀಯರ ತೋಟಕ್ಕೆ, ಮನೆ ಅವರಣಕ್ಕೆ ನುಗ್ಗುತ್ತಿದೆ.
ಈ ಬಗ್ಗೆ ಸಾರ್ವಜನಿಕರು ಸ್ಥಳೀಯ ಕೌನ್ಸಿಲರನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆ ನಿರ್ವಹಣೆಗೆ ಆಗ್ರಹಿಸಿದ್ದಾರೆ.
ಶೌಚಾಲಯದ ಪಿಟ್ ಗಳು ತುಂಬಿ ಹಾಸ್ಟೆಲ್ ಆವರಣವಿಡೀ ಕೊಳಚೆ ನೀರು ಹರಿದು ಅವ್ಯವಸ್ಥೆಯ ಆಗರವಾಗಿದೆ.
ಪ್ರದೇಶದಲ್ಲಿ ವಿದ್ಯಾರ್ಥಿನಿಯರ ರಕ್ಷಣೆಯ ಪ್ರಶ್ನೆ ಒಂದೆಡೆಯಾದರೆ ಇನ್ನೊಂದೆಡೆ ಆರೋಗ್ಯದ ಕಾಳಜಿಯನ್ನು ಸಂಬಂಧಪಟ್ಟ ಇಲಾಖೆ ಮರೆತಂತೆ ಕಾಣುತ್ತಿದೆ.
ಈ ಕುರಿತು ವಿದ್ಯಾರ್ಥಿನಿಯರು ಸ್ಥಳೀಯ ಕೌನ್ಸಿಲರ್ ಮೂಲಕ ಸಮಸ್ಯೆ ಪರಿಹಾರಕ್ಕೆ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
`ವಿದ್ಯಾರ್ಥಿನಿ ನಿಲಯದ ಸಮಸ್ಯೆಗಳ ಆಗರವನ್ನು ವಿದ್ಯಾರ್ಥಿನಿಯರು ಸ್ಥಳೀಯ ಜನಪ್ರತಿನಿಧಿಯಾಗಿರುವ ತನ್ನಲ್ಲಿ ದೂರಿಕೊಂಡರು.
ಅದರಂತೆ ಕೋಟೆಕಾರು ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ. ಪಂಚಾಯತ್ ಎಂಜಿನಿಯರ್ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.
ಶಾಸಕ ಯು.ಟಿ ಖಾದರ್ ಅವರನ್ನು ಭೇಟಿಯಾಗಿದ್ದು, ಜ.26 ರ ವೇಳೆಗೆ ಸಭೆ ಕರೆದು ಸಮಸ್ಯೆಗಳ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆ ಆಗ ಬಾರದು. ಅಪಾಯವಾದಲ್ಲಿ ಊರು ಮತ್ತು ಗ್ರಾಮಕ್ಕೆ ಕೆಟ್ಟ ಹೆಸರು.
ವಾರ್ಡಿನಲ್ಲಿ ಯಾವುದೇ ಸಮಸ್ಯೆಯಾಗ ಬಾರದು ಎನ್ನುವುದು ಜನಪ್ರತಿನಿಧಿಯಾದ ನನ್ನ ಅಭಿಪ್ರಾಯ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತು ತುರ್ತು ಪರಿಹಾರ ಕಂಡುಕೊಳ್ಳಬೇಕಿದೆ’ ಎನ್ನುತ್ತಾರೆ ಕೌನ್ಸಿಲರ್ ಹರೀಶ್ ರಾವ್ ಮಡ್ಯಾರ್.
ಈ ಸಮಾಜದಲ್ಲಿ ಹೆಣ್ಮಕ್ಕಳಿಗೆ ಅಭದ್ರತೆ ಕಾಡುವ ಕಾಲಘಟ್ಟದಲ್ಲಿ 250 ವಿದ್ಯಾರ್ಥಿನಿಯರು ವಾಸಿಸುವ ಈ ಸರ್ಕಾರಿ ಹಾಸ್ಟೆಲ್ ವ್ಯವಸ್ಥೆ ತುರ್ತಾಗಿ ಸರಿಪಡಿಸಿಕೊಳಬೇಕಾದ ಅಗತ್ಯವಿದೆ.