ಕಡಬ: ಭೂತಾರಾಧನೆ ಹಾಗೂ ದೈವನರ್ತಕರ ವೃತ್ತಿ ಜೀವನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯ್ಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಣಿಯೂರು ಗ್ರಾ.ಪಂ.ಸದಸ್ಯ ಲೋಕಯ್ಯ ಪರವ ದೋಳ್ಪಾಡಿ ಕಡಬ ಪೋಲಿಸ್ ಠಾಣಾಧಿಕಾರಿಯವರ ಮುಖಾಂತರ ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ‘ಪರವ ಸಮುದಾಯಕ್ಕೆ ಸೇರಿದ ನಾನು 23 ವರ್ಷಗಳಿಂದ ದೈವನರ್ತಕನಾಗಿ ಶ್ರದ್ಧಾ ಭಕ್ತಿಯಿಂದ ನಮ್ಮ ಸೇವೆಯನ್ನು ಮಾಡುತ್ತಾ ಬರುತ್ತಿದ್ದೇನೆ.
ಇತ್ತೀಚಿಗೆ ತುಳುನಾಡಿನ ಸಂಸ್ಕೃತಿ ಭೂತಾರಾಧನೆ ಬಗ್ಗೆ ಮಾಜಿ ಸಚಿವೆ ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆಗೆ ದೈವ ನರ್ತಕರಿಗೆ ಸರಕಾರ ಎರಡು ಸಾವಿರ ರೂಪಾಯಿ ನೀಡಬಾರದಿತ್ತು.
ಭೂತಾರಾದನೆ ಸಮಯದಲ್ಲಿ ದೇವರು ಬರೋದು ಸತ್ಯ ಅಲ್ಲವೇ ಅಲ್ಲ. ದೈವ ನರ್ತಕರ ಜೀವನಕ್ಕೆ ಬೇರೆ ದಾರಿ ತೋರಿಸಬೇಕು. ಅದರ ಬದಲಾಗಿ ಸರಕಾರ ಮೂಕನಾಯಕರಿಗೆ ಪ್ರಾಮುಖ್ಯತೆ ನೀಡಿದಂತಾಗಿದೆ.
ದೈವ ನರ್ತಕರು ಓಹೋ ಎಂದು ಚೀರಾಡುವುದು ಕುಣಿಯುವುದು ದೇವರು ಮೈಮೇಲೆ ಬರುವುದರಿಂದ ಅಲ್ಲ. ಅದಕ್ಕೆ ಬೇರೆ ಕಾರಣವಿದೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯಿಂದ ನಮ್ಮ ದೈವನರ್ತಕರ ಸಮುದಾಯವನ್ನು ತುಳಿಯುವ ಸಂಚನ್ನು ರೂಪಿಸಿದ್ದಾರೆ. ಹಾಗೂ ಇನ್ನು ಮುಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಸಮುದಾಯವನ್ನು ಕೀಳಾಗಿ ಮಾತನಾಡುವ ಇಂಥವರನ್ನು ಹಾಗೂ ಇನ್ನು ಮುಂದಕ್ಕೆ ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ ನಮ್ಮ ಸಮುದಾಯದವರಿಂದ ಬಹಿಷ್ಠಾರ ಇರುತ್ತದೆ’ ಎಂದು ಉಲ್ಲೇಖಿಸಿದ್ದಾರೆ.
ವಿವಾದಾತ್ಮಕ ಹೇಳಿಕೆ ನೀಡಿರುವ ಬಿ.ಟಿ ಲಲಿತಾ ನಾಯ್ಕ್ ವಿರುದ್ಧ ಪೋಲಿಸ್ ಠಾಣೆಗೆ ನೀಡಿದ್ದಾರೆ.