DAKSHINA KANNADA
ಫೇಸ್ಬುಕ್ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ; ಕುತ್ತಾರು ಆಡಳಿತ ಮಂಡಳಿಯಿಂದ ದೂರು ದಾಖಲು
ಉಳ್ಳಾಲ: ಕುತ್ತಾರು ಶ್ರೀ ಕೊರಗಜ್ಜ ದೈವದ ಆದಿ ಸ್ಥಳಗಳ ಆಡಳಿತ ಮಂಡಳಿಯ ಸುಪರ್ದಿಯಲ್ಲಿ ನಡೆಯುವಂತಹ ಎಲ್ಲಾ ಕಾರ್ಯಕ್ರಮಗಳು ಭಕ್ತಾಧಿಗಳ ಸಮ್ಮುಖದಲ್ಲಿ ಕ್ರಮಬದ್ಧವಾಗಿ ನಡೆಯುತ್ತಿದ್ದು ಇದರ ವಿರುದ್ಧ “ಡಿವೋಟಿಸ್ ಆಫ್ ಕುತ್ತಾರು ಕೊರಗಜ್ಜ” ಎಂಬ ಶಿರೋನಾಮೆಯಲ್ಲಿ ಖಾತೆ ತೆರೆದು ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸುತ್ತಿರುವ ಕುರಿತು ಈ ಸಂಸ್ಥೆಯ ವಿರುದ್ಧ ದೂರು ದಾಖಲಿಸಲಾಗಿದೆ.
Read More..; ಕುತ್ತಾರಿಗೆ ಭೇಟಿ ನೀಡಿದ ಕ್ರೇಜಿ ಸ್ಟಾರ್ ಮಕ್ಕಳು..ಅವಳಿ ನಟಿಯರ ಜೊತೆ ಆಗಮನ
ಕುತ್ತಾರು ಆದಿಸ್ಥಳದ ಕೊರಗಜ್ಜನ ಆಡಳಿತ ಮಂಡಳಿಯು ಯಾವುದೇ ಉದ್ದೇಶಕ್ಕಾಗಿ ಆನ್ ಲೈನ್ ಮುಖಾಂತರ ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸುವುದಿಲ್ಲ. ಕೊರಗಜ್ಜ ದೈವದ ಮೇಲೆ ಸಾರ್ವಜನಿಕರಿಗೆ ಇರುವ ಭಕ್ತಿಯನ್ನೇ ಪ್ರಧಾನವಾಗಿರಿಸಿಕೊಂಡು “ಡಿವೋಟಿಸ್ ಆಫ್ ಕುತ್ತಾರು ಕೊರಗಜ್ಜ” ಎಂಬ ಫೇಸ್ಬುಕ್ ಖಾತೆಯಲ್ಲಿ ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವುದು ಬಹಳ ವಿಷಾದನೀಯ ಸಂಗತಿ. ಶ್ರೀ ಕ್ಷೇತ್ರದಲ್ಲಿ ಯಾವುದೇ ಆನ್ಲೈನ್ ಸೇವೆಯಾಗಲಿ ಆನ್ಲೈನ್ ಮುಖಾಂತರ ದೇಣಿಗೆಯಾಗಲಿ ಸಂಗ್ರಹಿಸುವುದಿಲ್ಲ. ಶ್ರೀ ಕ್ಷೇತ್ರದಲ್ಲಿ ಆಡಳಿತ ಮಂಡಳಿಯ ಶಿರೋನಾಮೆಯ ಅಡಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯಾದಂತಹ ಪ್ರಕಟಣೆಗಳು ಬಂದಲ್ಲಿ ಇಂತಹ ಮನವಿಗೆ ಸ್ಪಂದಿಸಬಾರದಾಗಿ ಭಕ್ತರಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ತಪ್ಪು ಮಾಹಿತಿ ನೀಡಿ ಸಾರ್ವಜನಿಕರ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿರುವುದರಿಂದ ಶ್ರೀ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡಿದಂತಾಗಿದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಶ್ರೀ ಕ್ಷೇತ್ರದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುವುದು ಕೂಡ ಕಾನೂನು ಬಾಹಿರವಾಗಿರುತ್ತದೆ. ಶ್ರೀ ಕ್ಷೇತ್ರದಲ್ಲಿ ನಡೆಯುವಂತಹ ಎಲ್ಲ ರೀತಿಯ ಸೇವೆಗೆ ಭಕ್ತರಿಗೆ ಆಡಳಿತ ಮಂಡಳಿಯಿಂದ ಕಡ್ಡಾಯವಾಗಿ ರಶೀದಿಯನ್ನು ನೀಡಲಾಗುತ್ತಿದೆ. ಆದುದರಿಂದ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಸುಳ್ಳು ಮಾಹಿತಿಯನ್ನು ಸಾರ್ವಜನಿಕರು ಹಾಗೂ ಭಕ್ತರು ನಂಬಬಾರದಾಗಿ ಕ್ಷೇತ್ರ ಆಡಳಿತ ಮಂಡಳಿ ವಿನಂತಿಸಿದೆ.
DAKSHINA KANNADA
ಮುಳುಗಿದ ಪಡೀಲ್ ಅಂಡರ್ಪಾಸ್ – ಸಂಚಾರ ಸ್ಥಗಿತ
ಮಂಗಳೂರು: ಕರಾವಳಿಯಾದ್ಯಂತ ಸುರಿಯುತ್ತಿರುವ ಮಳೆ ಜನತೆಯನ್ನು ಚಂಡಿ ಹಿಡಿಸಿ ಬಿಟ್ಟಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಎರಡು ದಿನಗಳಿಂದ ಬಿರುಸು ಪಡೆದುಕೊಂಡಿದ್ದು ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ನಗರದ ಹಲವು ಕಡೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದ್ದು, ಜನರು ಪರದಾಡುವಂತಾಗಿದೆ. ನಗರದ ಪಡೀಲ್ – ಬಜಾಲ್ ಸಂಪರ್ಕಿಸುವ ರಸ್ತೆಯ ಅಂಡರ್ಪಾಸ್ ನೀರಿನಿಂದ ತುಂಬಿ ಮುಳುಗಿ ಹೋಗಿದೆ. ಇಂದು ಬೆಳಿಗ್ಗೆ ಅಂಡರ್ಪಾಸ್ ಕೆಳಭಾಗದಲ್ಲಿ ನೀರು ತುಂಬಿಕೊಂಡಿದ್ದು ಜನ ಸಂಚರಿಸಲಾಗದೇ ತೊಂದರೆ ಅನುಭವಿಸಿದರು.
ಕಾರೊಂದು ನೀರಿನಲ್ಲಿ ಬರಲಾಗದ ಸ್ಥಿತಿಯಲ್ಲಿದ್ದು ಬಳಿಕ ಸ್ಥಳೀಯರು ವಾಹನವನ್ನು ದೂಡಿಕೊಂಡು ಬಂದು ಮೇಲೆ ತಂದಿದ್ದಾರೆ. ಪಡೀಲ್ – ಬಜಾಲ್ ಸಂಪರ್ಕಿಸುವ ಈ ಅಂಡರ್ಪಾಸ್ ಪ್ರತೀ ಮಳೆಗಾಲದ ಸಂದರ್ಭದಲ್ಲೂ ಜನ ಕಂಗೆಡುತ್ತಿದ್ದಾರೆ.
DAKSHINA KANNADA
ರಾಜ್ಯದಲ್ಲಿ ಐದು ದಿನಗಳ ಕಾಲ ಭರ್ಜರಿ ಮಳೆಯ ಎಚ್ಚರಿಕೆ
ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಭಾಗಗಳಲ್ಲೂ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ ಐದು ದಿನಗಳ ಕಾಲ ನಿರಂತರ ಮಳೆಯಾಗಲಿದ್ದು, ಎಚ್ಚರದಿಂದ ಇರುವಂತೆ ಸೂಚಿಸಿದೆ.
ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಉತ್ತರ ಒಳನಾಡು ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಆರೆಂಜ್ ಅಲರ್ಟ್?
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಮಂಡ್ಯ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ
ಎಲ್ಲೆಲ್ಲಿ ಯೆಲ್ಲೋ ಅಲರ್ಟ್?
ಬಾಗಲಕೋಟೆ, ಗದಗ, ಬೀದರ್, ರಾಯಚೂರು, ಬಳ್ಳಾರಿ, ಯಾದಗಿರಿ
DAKSHINA KANNADA
ಕುಂಬಳೆ: ಪತ್ನಿಯ ಸೀಮಂತಕ್ಕಾಗಿ ವಿದೇಶದಿಂದ ಊರಿಗೆ ಬಂದಿದ್ದ ಯುವಕ ಬೈಕ್ ಅಪಘಾತದಲ್ಲಿ ಮೃತ್ಯು
ಕಾಸರಗೋಡು: ಎರಡು ದಿನಗಳ ಹಿಂದೆಯಷ್ಟೇ ಪತ್ನಿಯ ಸೀಮಂತ ಕಾರ್ಯಕ್ರಮಕ್ಕಾಗಿ ಕೊಲ್ಲಿಯಿಂದ ಊರಿಗೆ ಬಂದಿದ್ದ ಯುವಕ ಬೈಕ್ ಅಪಘಾತದಲ್ಲಿ ಸಾವಿಗೀಡಾದ ಘಟನೆ ನಡೆದಿದೆ. ಬಂಬ್ರಾಣ ಉಜಾರು ನಿವಾಸಿ ದಿ|ಅಮ್ಮು ಶೆಟ್ಟಿ ಅವರ ಪುತ್ರ ಅಜಿತ್ ಶೆಟ್ಟಿ(32) ಸಾವಿಗೀಡಾದವರು.
ಜೂ.24 ರಂದು ರಾತ್ರಿ 9.30ಕ್ಕೆ ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಈ ಸಾವು ಸಂಭವಿಸಿದೆ.
ಅವರು ಕತಾರ್ನಲ್ಲಿ ಉದ್ಯೋಗದಲ್ಲಿದ್ದರು. ಜೂ. 22ರಂದು ಊರಿಗೆ ಬಂದಿದ್ದರು. ಜೂ. 23ರಂದು ಪತ್ನಿಯ ಸೀಮಂತ ಕಾರ್ಯಕ್ರಮ ನಡೆದಿತ್ತು. ಜೂ. 24ರಂದು ರಾತ್ರಿ ಕುಂಬಳೆ ಪೇಟೆಗೆ ಬಂದ ಅಜಿತ್ ಶೆಟ್ಟಿ ಆಹಾರ ವಸ್ತುಗಳನ್ನು ಖರೀದಿಸಿ ಬುಲೆಟ್ನಲ್ಲಿ ಮನೆಗೆ ಮರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ಆರಿಕ್ಕಾಡಿ ಶ್ರೀ ಹನುಮಾನ್ ದೇವಸ್ಥಾನ ಸಮೀಪ ಬೈಕ್ ರಸ್ತೆಯ ಡಿವೈಡರ್ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಹಾಗು ಇತರ ಪ್ರಯಾಣಿಕರು ಕುಂಬಳೆಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಲುಪಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ಸಾವನ್ನಪ್ಪಿದರು. ಮೃತರು ತಾಯಿ, ಪತ್ನಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.