LATEST NEWS
ಹಿಮಾಚಲದಲ್ಲಿ ಮೇಘಸ್ಫೋಟದಿಂದ 58 ರಸ್ತೆಗಳು ಬಂದ್
ಶಿಮ್ಲಾ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶುಕ್ರವಾರ ಶಿಮ್ಲಾ ಜಿಲ್ಲೆಯ ರಾಮ್ಪುರ ಉಪವಿಭಾಗದ ತಕ್ಲೋಚ್ ಪ್ರದೇಶದಲ್ಲಿ ತಾಜಾ ಮೇಘಸ್ಫೋಟ ಮುಂದುವರೆದಿದೆ. ಮೇಘಸ್ಪೋಟದಿಂದ 30 ಮೀಟರ್ ರಸ್ತೆ ಹಾನಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ 12 ಜಿಲ್ಲೆಗಳ ಪೈಕಿ 10 ಜಿಲ್ಲೆಗಳಲ್ಲಿ ಆಗಸ್ಟ್ 20ರವರೆಗೆ ಭಾರೀ ಮಳೆಯ ಕುರಿತು ಭಾರತೀಯ ಹವಾಮಾನ ಇಲಾಖೆ ‘ಹಳದಿ’ ಅಲರ್ಟ್ ನೀಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಿಂದಾಗಿ 58 ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ನೇತೃತ್ವದ ತಂಡವು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಧಾವಿಸಿದೆ ಎಂದು ಶಿಮ್ಲಾ ಉಪ ಆಯುಕ್ತ ಅನುಪಮ್ ಕಶ್ಯಪ್ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ 5 ಅನ್ನು ಬಂದ್ ಮಾಡಲಾಗಿದೆ ಮತ್ತು ನೆಗುಲ್ಸಾರಿ ಸ್ಲೈಡಿಂಗ್ ಪಾಯಿಂಟ್ ಬಳಿಯ ರಸ್ತೆಯು ಕುಸಿದ ನಂತರ ಕಿನ್ನೌರ್ ಜಿಲ್ಲೆಯನ್ನು ಶಿಮ್ಲಾದಿಂದ ಕಡಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆಗಸ್ಟ್ 22ರವರೆಗೆ ಹಿಮಾಚಲ ಪ್ರದೇಶದಲ್ಲಿ ಆರ್ದ್ರ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ. ಹವಾಮಾನ ಇಲಾಖೆ ಕಚೇರಿಯು ಚಂಬಾ, ಕಂಗ್ರಾ, ಶಿಮ್ಲಾ ಮತ್ತು ಸಿರ್ಮೌರ್ ಜಿಲ್ಲೆಗಳ ಭಾಗಗಳಲ್ಲಿ ಪ್ರವಾಹದ ಅಪಾಯ ಮತ್ತು ಹಾನಿಯ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದೆ. ಭಾರೀ ಮಳೆಯ ನಡುವೆ ಹಿಮಾಚಲದಲ್ಲಿ 58 ರಸ್ತೆಗಳನ್ನು ಮುಚ್ಚಲಾಗಿದೆ. ಶಿಮ್ಲಾ ಜಿಲ್ಲೆಯ ಹಾಟ್ಕೋಟಿ ಮತ್ತು ಸಿರ್ಮೌರ್ ಜಿಲ್ಲೆಯ ಪೊಂಟಾ ಸಾಹಿಬ್ ನಡುವಿನ ರಾಷ್ಟ್ರೀಯ ಹೆದ್ದಾರಿ 707ಯಲ್ಲಿ ಶುಕ್ರವಾರದ ಮಳೆಯಿಂದಾಗಿ 58 ರಸ್ತೆಗಳನ್ನು ಮುಚ್ಚಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಶಿಮ್ಲಾದಲ್ಲಿ 19, ಮಂಡಿಯಲ್ಲಿ 14, ಕಂಗ್ರಾದಲ್ಲಿ 12, ಕುಲುವಿನಲ್ಲಿ 8, ಕಿನ್ನೌರ್ನಲ್ಲಿ 3, ಸಿರ್ಮೌರ್, ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಗಳಲ್ಲಿ ತಲಾ ಒಂದೊಂದು ರಸ್ತೆಗಳನ್ನು ಮುಚ್ಚಲಾಗಿದೆ. ಮಳೆಯಿಂದಾಗಿ 31 ವಿದ್ಯುತ್ ಮತ್ತು 4 ನೀರು ಸರಬರಾಜು ಯೋಜನೆಗಳಿಗೆ ಅಡ್ಡಿಯಾಗಿದೆ. ಹಿಮಾಚಲ ಪ್ರದೇಶದ ಈ ಮಾನ್ಸೂನ್ನಲ್ಲಿ ಶುಕ್ರವಾರದವರೆಗೆ ಶೇ. 23ರಷ್ಟು ಮಳೆಯ ಕೊರತೆಯಿದೆ ಮತ್ತು ರಾಜ್ಯವು ಸರಾಸರಿ 513.5 ಮಿ.ಮೀ ವಿರುದ್ಧ 397.9 ಮಿ.ಮೀ ಮಳೆಯ ಮುನ್ಸೂಚನೆ ನೀಡಿದೆ.
ಮಳೆ ಸಂಬಂಧಿತ ಘಟನೆಗಳಲ್ಲಿ 120 ಜನರು ಸಾವನ್ನಪ್ಪಿದ್ದಾರೆ. ಜೂನ್ 27 ಮತ್ತು ಶುಕ್ರವಾರದ ನಡುವೆ ರಾಜ್ಯವು ಸುಮಾರು 1,129 ಕೋಟಿ ರೂ. ನಷ್ಟವನ್ನು ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
LATEST NEWS
ಅಂಬ್ಯುಲೆನ್ಸ್ ಸಿಗದೆ ಬೈಕ್ನಲ್ಲಿ ತಂದೆಯ ಮೃತ ದೇಹ ಸಾಗಿಸಿದ ಮಕ್ಕಳು
ಪಾವಗಡ(ತುಮಕೂರು): ಇದ್ಯಾವುದೋ ಹೊರ ರಾಜ್ಯದಲ್ಲಿ ನಡೆದ ಘಟನೆ ಅಲ್ಲ..ಬದಲಾಗಿ ನಮ್ಮದೇ ರಾಜ್ಯದ ಕಲ್ಪತರು ನಾಡು ಎಂದು ಕರೆಸಿಕೊಂಡಿರೋ ತುಮಕೂರು ಜಿಲ್ಲೆಯಲ್ಲಿ ನಡೆದಿರೋ ಘಟನೆ. ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಸರ್ಕಾರಿ ಅಂಬ್ಯುಲೆನ್ಸ್ ಸೇವೆ ಸಿಗದೆ ಸಹೋದರರಿಬ್ಬರು ತಮ್ಮ ತಂದೆಯ ಮೃತ ದೇಹವನ್ನು ಬೈಕ್ನಲ್ಲೇ ಸ್ವಗ್ರಾಮಕ್ಕೆ ಸಾಗಿಸಿರೋ ಹೃದಯ ವಿದ್ರಾವಕ ಘಟನೆ ಇದು. ದೇಶ ಇಷ್ಟೊಂದು ಮುಂದುವರೆದಿದ್ರೂ ಬಡ ಜನರು ಅದ್ಯಾವ ರೀತಿಯ ಪಾಡು ಪಡ್ತಾ ಇದ್ದಾರೆ ಅನ್ನೋದಿಕ್ಕೆ ಹಿಡಿದ ಕೈಗನ್ನಡಿ ಇದು.
ಇದೊಂದು ಹೃದಯ ವಿದ್ರಾವಕ ಘಟನೆಯಾಗಿದ್ದು, ಅಂಬ್ಯುಲೆನ್ಸ್ ಸೇವೆ ಇಲ್ಲದೇ ಇದು ನಡೆದಿರುವುದು ವಿಪರ್ಯಾಸ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 80 ವರ್ಷ ಪ್ರಾಯದ ಹೊನ್ನೂರಪ್ಪ ಎಂಬವರನ್ನು ಅವರ ಮಕ್ಕಳು ವೈ.ಎನ್.ಹೊಸಕೋಟೆ ಸಮೂದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಹೊನ್ನೂರಪ್ಪ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ದಳವಾಯಿಹಳ್ಳಿ ಗ್ರಾಮದವರಾಗಿದ್ದ ಇವರು ತಂದೆಯ ಮೃತ ದೇಹ ಸಾಗಿಸಲು ಅಂಬ್ಯುಲೆನ್ಸ್ಗಾಗಿ ಹುಡಕಾಟ ನಡೆಸಿದ್ದಾರೆ. ಇಲ್ಲಿ 108 ಅಂಬ್ಯುಲೆನ್ಸ್ ವಾಹನ ಇದೆಯಾದ್ರೂ ಕಾನೂನು ಪ್ರಕಾರ ಅದರಲ್ಲಿ ಮೃತ ದೇಹ ಸಾಗಿಸುವಂತಿಲ್ಲ. ಇನ್ನು ಈ ಭಾಗದಲ್ಲಿ ಖಾಸಗಿಯಾಗಿ ಆಗಲಿ ಸರ್ಕಾರಿ ಅಂಬ್ಯುಲೆನ್ಸ್ ಇಲ್ಲದ ಕಾರಣ ಮಕ್ಕಳು ಇಂತಹ ಒಂದು ನಿರ್ದಾರ ಮಾಡಿದ್ದಾರೆ. ತಮ್ಮ ಬೈಕ್ನಲ್ಲಿ ನಡುವಿನಲ್ಲಿ ತಂದೆಯ ಮೃತ ದೇಹ ಇಟ್ಟು ತಮ್ಮ ಗ್ರಾಮವಾದ ದಳವಾಯಿಹಳ್ಳಿಗೆ ಸಹೋದರರು ತೆರಳಿದ್ದಾರೆ.
ವೈ.ಎನ್.ಹೊಸಕೋಟೆಯ ಸಮೂದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 34 ಕ್ಕೂ ಹೆಚ್ಚು ಹಳ್ಳಿಗಳು ಬರುತ್ತದೆ. ಸಾವಿರಾರು ಜನ ಇಲ್ಲಿ ಚಿಕಿತ್ಸೆಗೆ ಬರುತ್ತಾರೆಯಾದ್ರೂ ಇಲ್ಲಿ ಸರ್ಕಾರಿ ಅಂಬ್ಯುಲೆನ್ಸ್ ವಾಹನ ಇಲ್ಲದೇ ಇರೋದು ಈ ಸಮಸ್ಯೆಗೆ ಕಾರಣವಾಗಿದೆ.
LATEST NEWS
ಒನ್ ನೇಷನ್ ಒನ್ ಎಲೆಕ್ಷನ್ಗೆ ಕೇಂದ್ರದ ಅನುಮೋದನೆ..?
ನವದೆಹಲಿ : ಒನ್ ನೇಷನ್ ಒನ್ ಎಲೆಕ್ಷನ್ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ (18 ಸೆಪ್ಟೆಂಬರ್ 2024) ಅನುಮೋದನೆ ನೀಡಿದೆ. ಮಾಜಿ ರಾಷ್ಟ್ರಪತಿ ನೇತೃತ್ವದ ಸಮಿತಿಯು ಮಾರ್ಚ್ 2024 ರಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ತನ್ನ ವರದಿಯನ್ನು ಸಲ್ಲಿಸಿತ್ತು. ಇದೀಗ ಈ ವಿಚಾರವಾಗಿ ದೇಶದಲ್ಲಿ ರಾಜಕೀಯ ಬಿಸಿ ಏರಿದೆ. ಇದು ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ನಿರ್ಧಾರ ಎಂದು ಕಾಂಗ್ರೆಸ್ ಹೇಳಿದೆ.
ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಒಂದು ರಾಷ್ಟ್ರ ಒಂದು ಚುನಾವಣಾ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸುತ್ತದೆ, ನಂತರ ಅದು ಕಾನೂನಾಗಿ ಪರಿಣಮಿಸುತ್ತದೆ. ಮಾಜಿ ರಾಷ್ಟ್ರಪತಿ ನೇತೃತ್ವದ ಸಮಿತಿಯು ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ದೇಶದ 62 ರಾಜಕೀಯ ಪಕ್ಷಗಳನ್ನು ಸಂಪರ್ಕಿಸಿದ್ದು, ಅವುಗಳಲ್ಲಿ 32 ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿದೆ. ಇದರಲ್ಲಿ 15 ಪಕ್ಷಗಳು ಒಂದು ರಾಷ್ಟ್ರೀಯ ಒಂದು ಚುನಾವಣೆಯನ್ನು ಬೆಂಬಲಿಸಲಿಲ್ಲ ಮತ್ತು 15 ಪಕ್ಷಗಳು ಯಾವುದೇ ಉತ್ತರವನ್ನು ನೀಡಲಿಲ್ಲ.
ದೇಶದಲ್ಲಿ ಮೂರ್ನಾಲ್ಕು ತಿಂಗಳು ಮಾತ್ರ ಚುನಾವಣೆ ನಡೆಯಲಿ ಎಂದು ಪ್ರಧಾನಿ ಹೇಳಿದ್ದರು. ವರ್ಷವಿಡೀ ರಾಜಕೀಯ ಇರಬಾರದು. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ದೇಶದ ಸಂಪನ್ಮೂಲಗಳು ಉಳಿತಾಯವಾಗುತ್ತದೆ.’’ ಅದೇ ಸಮಯದಲ್ಲಿ ಕೆಂಪು ಕೋಟೆಯ ಆವರಣದಿಂದ ಪ್ರಧಾನಿ ಮೋದಿ ಅವರು ‘‘ದೇಶವು ಒಂದು ರಾಷ್ಟ್ರ, ಒಂದು ಚುನಾವಣೆಗೆ ಮುಂದೆ ಬರಬೇಕು’’ ಎಂದು ಹೇಳಿದ್ದರು.
ಕ್ಯಾಬಿನೆಟ್ ನಿರ್ಧಾರಗಳನ್ನು ವಿವರಿಸುವಾಗ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು 1951 ರಿಂದ 1967 ರವರೆಗೆ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆದಿವೆ ಎಂದು ಹೇಳಿದರು. ಸಮಾಜದ ಎಲ್ಲ ವರ್ಗದವರಿಂದ ಅಭಿಪ್ರಾಯ ಕೇಳಲಾಗಿದೆ ಎಂದರು. ಮುಂದಿನ ಕೆಲವು ತಿಂಗಳುಗಳಲ್ಲಿ ಒಮ್ಮತ ಮೂಡಿಸಲು ಪ್ರಯತ್ನಿಸಲಾಗುವುದು. ಸಮಿತಿಯು 191 ದಿನಗಳ ಕಾಲ ಈ ವಿಷಯದ ಮೇಲೆ ಕೆಲಸ ಮಾಡಿದೆ. ಸಮಿತಿಯು ಈ ವಿಷಯದ ಬಗ್ಗೆ 21 ಸಾವಿರದ 558 ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಇವರಲ್ಲಿ ಶೇ.80ರಷ್ಟು ಮಂದಿ ಒಂದು ದೇಶ, ಒಂದು ಚುನಾವಣೆಯನ್ನು ಬೆಂಬಲಿಸಿದ್ದಾರೆ.
ಈಗ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರವಾಗಿ ದೇಶದದಲ್ಲಿ ರಾಜಕೀಯ ಬಿಸಿ ಹೆಚ್ಚಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಒನ್ ನೇಷನ್ ಒನ್ ಎಲೆಕ್ಷನ್’ ಪದ್ಧತಿ ಪ್ರಾಯೋಗಿಕವಾಗಿಲ್ಲ, ಚುನಾವಣೆ ವೇಳೆ ಬಿಜೆಪಿ ಆ ಮೂಲಕ ನೈಜ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ. ಒಂದು ದೇಶ, ಒಂದು ಚುನಾವಣೆ ಎಂಬ ವ್ಯವಸ್ಥೆ ಜಾರಿಯಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ವರದಿಯಲ್ಲಿ ಇರುವ ಶಿಫಾರಸುಗಳು ಯಾವುದು ?
1. ಈ ವರದಿಯಲ್ಲಿ ಮೊದಲ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂದು ಹೇಳಲಾಗಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ಪೂರ್ಣಗೊಂಡ 100 ದಿನಗಳ ಒಳಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ನಡೆಸಬೇಕು ಎಂದು ಶಿಫಾರಸು ಮಾಡಲಾಗಿದೆ. ಇಡೀ ದೇಶದ ಮತದಾರರಿಗೆ ಒಂದೇ ಮತದಾರರ ಪಟ್ಟಿ ಇರಬೇಕು, ಎಲ್ಲರಿಗೂ ಸಾಮಾನ್ಯ ಮತದಾರರ ಚೀಟಿ ಇರಬೇಕು’ ಎಂದು ಸಮಿತಿಯ ಶಿಫಾರಸು ಹೇಳಿದೆ.
2. ರಾಜ್ಯ ಚುನಾವಣಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಭಾರತೀಯ ಚುನಾವಣಾ ಆಯೋಗದ ಪರವಾಗಿ ಸಾಮಾನ್ಯ ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಯನ್ನು ತಯಾರಿಸಲು ಸಮಿತಿಯು ಶಿಫಾರಸು ಮಾಡಿದೆ. ಪ್ರಸ್ತುತ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯು ಭಾರತದ ಚುನಾವಣಾ ಆಯೋಗದ ಮೇಲಿದೆ, ಆದರೆ ಮುನ್ಸಿಪಲ್ ಕಾರ್ಪೊರೇಶನ್ಗಳು ಮತ್ತು ಪಂಚಾಯತ್ಗಳಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ರಾಜ್ಯ ಚುನಾವಣಾ ಆಯೋಗವು ನಡೆಸುತ್ತದೆ. ಸಮಿತಿಯು 18 ಸಾಂವಿಧಾನಿಕ ತಿದ್ದುಪಡಿಗಳನ್ನು ಶಿಫಾರಸು ಮಾಡಿದೆ, ಅವುಗಳಲ್ಲಿ ಹೆಚ್ಚಿನವು ರಾಜ್ಯ ಶಾಸಕಾಂಗಗಳ ಅನುಮೋದನೆಯ ಅಗತ್ಯವಿರುವುದಿಲ್ಲ. ಆದಾಗ್ಯೂ, ಇದಕ್ಕೆ ಕೆಲವು ಸಾಂವಿಧಾನಿಕ ತಿದ್ದುಪಡಿ ಮಸೂದೆಗಳು ಬೇಕಾಗುತ್ತವೆ, ಅದನ್ನು ಸಂಸತ್ತು ಅಂಗೀಕರಿಸಬೇಕಾಗಿದೆ.
3. ಸುದ್ದಿ ಸಂಸ್ಥೆ PTI ಯ ವರದಿಯ ಪ್ರಕಾರ, ಕಾನೂನು ಆಯೋಗವು 2029 ರಿಂದ ಮೂರು ಹಂತದ ಸರ್ಕಾರ, ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಪುರಸಭೆಗಳು ಮತ್ತು ಪಂಚಾಯತ್ಗಳಂತಹ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಮತ್ತು ಅತಂತ್ರ ಫಲಿತಾಂಶದ ಸಮಯದಲ್ಲಿ ಏಕೀಕೃತ ಸರ್ಕಾರವನ್ನು ರಚಿಸಲು ಶಿಫಾರಸು ಮಾಡಬಹುದು.
LATEST NEWS
ವಾಮಂಜೂರು ಶಾರದಾ ಮಹೋತ್ಸವದ ಕಾರ್ಯಾಲಯ ಉದ್ಘಾಟನೆ
ಮಂಗಳೂರು: ಶ್ರೀ ರಕ್ತೇಶ್ವರಿ ಮತ್ತು ಪಂಚದೇವತಾ ಸಾನಿಧ್ಯ ಶ್ರೀರಾಮನಗರ,ವಾಮಂಜೂರು ಹಾಗೂ ವಾಮಂಜೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ ಸಮಿತಿ(ರಿ)ವತಿಯಿಂದ ಅಕ್ಟೋಬರ್ 9ರಿಂದ 13ರವರೆಗೆ ವಾಮಂಜೂರಿನ ಕೇಂದ್ರ ಮೈದಾನದಲ್ಲಿ “ವಾಮಂಜೂರು ಶಾರದಾ ಮಹೋತ್ಸವ” ನಡೆಯಲಿದ್ದು,ಇದರ ಕಾರ್ಯಾಲಯವನ್ನ ವಾಮಾಂಜೂರಿನ ಬಾವ ಬಿಲ್ಡರ್ಸ್ ನ ಕಟ್ಟಡದಲ್ಲಿ ಸೆ.17 ಉದ್ಘಾಟಿಸಲಾಯಿತು.
ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿ ಪ್ರಮುಖರಾದ ಚಂದ್ರಶೇಖರ ರಾಮನಗರ,ಸದಾನಂದ ಪೂಜಾರಿ,ಮೋಹನ್ ಪಚ್ಚನಾಡಿ,ರಾಕೇಶ್ ಶೆಟ್ಟಿ ಅಮೃತನಗರ,ಅಜಯ್ ಮಂಗಳನಗರ,ಬಿಪಿನ್ ವಾಮಂಜೂರು,ಗೋಪಾಲ್ ದೇವಿನಗರ, ಸುರೇಂದ್ರ ಗುರುಪುರ, ನವೀನ್ ಅಮೃತ ನಗರ,ವೆಂಕಪ್ಪ ಅಮೃತ ನಗರ,ನವೀನ್ ಶೆಟ್ಟಿ ಸಂತೋಷ್ ನಗರ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.