ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನಿಯೋಗದಿಂದ ಮುಖ್ಯಮಂತ್ರಿ ಭೇಟಿ..!
ಬೆಂಗಳೂರು: ಹೊಸ ಶಿಕ್ಷಣ ನೀತಿಯಲ್ಲಿ ಒಂದನೆಯ ತರಗತಿಯಿಂದ ಐದನೆಯ ತರಗತಿಯವರೆಗೆ ಕೊಂಕಣಿ ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣದ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿತು.
ಡಿಸೆಂಬರ್ 10, ಗುರುವಾರದಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಯೋಗವು ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರನ್ನು ಬೇಟಿ ಮಾಡಿತು.
ಆರನೆಯ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಕೊಂಕಣಿ ಭಾಷೆಯಲ್ಲಿ ಕಲಿಕೆ, ಡಿ.ಎಡ್, ಬಿ.ಎಡ್, ಎಂ.ಎಡ್. ತರಗತಿಗಳಲ್ಲಿ ಕೊಂಕಣಿ ಭಾಷೆ ಅಳವಡಿಕೆ, ವಿವಿಧ ಹಂತಗಳಲ್ಲಿ ಕೊಂಕಣಿ ಭಾಷಾ ಶಿಕ್ಷಕರ ನೇಮಕಾತಿಯೇ ಮೊದಲಾದ ಬೇಡಿಕೆಗಳನ್ನು ಮುಖ್ಯ ಮಂತ್ರಿ ಯಡಿಯೂರಪ್ಪ ನವರು ಸಹಾನುಭೂತಿಯಿಂದ ಆಲಿಸಿದರು. ಹೊಸ ಶಿಕ್ಷಣ ನೀತಿಯನ್ವಯ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣದ ಬೇಡಿಕೆ ಸಮಂಜಸವಾದುದು ಎಂದು ತಿಳಿಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾಕ್ಟರ್ ಕೆ. ಜಗದೀಶ್ ಪೈಯವರ ನೇತೃತ್ವದ ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗದಲ್ಲಿ, ಅಕಾಡೆಮಿಯ ಸದಸ್ಯರಾದ ಸಾಣೂರು ನರಸಿಂಹ ಕಾಮತ್, ಅರುಣ್ ಶೇಟ್, ನವೀನ್ ನಾಯಕ್ ಮತ್ತು ಗುರುಮೂರ್ತಿ ಶೇಟ್ ರವರು ಉಪಸ್ಥಿತರಿದ್ದರು.