ಮಂಗಳೂರು ನಗರದ ನಂತೂರು ಜಂಕ್ಷನ್ ಮೃತ್ಯು ಕೂಪವಾಗಿ ಪರಿಣಮಿಸಿದೆ, ಇಂದು ಅಪರಾಹ್ನ ಟಿಪ್ಪರ್ ಅಡಿಗೆ ಬಿದ್ದು ಇಬ್ಬರು ದ್ವಿಚಕ್ರ ಸವಾರರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮಂಗಳೂರು :ಮಂಗಳೂರು ನಗರದ ನಂತೂರು ಜಂಕ್ಷನ್ ನಲ್ಲಿ ಇಂದು ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸವಾರ ಬೋಳೂರು ನಿವಾಸಿ ಸಾಮ್ಯುವೆಲ್ ಜೇಸುದಾಸ್(66) ಮತ್ತು ಸಹಸವಾರೆ ಕುಂಪಲ ನಿವಾಸಿ ಭೂಮಿಕಾ(17) ಸಾವನ್ನಪ್ಪಿದ್ದಾರೆ.
ಸಾಮ್ಯುವೆಲ್ ಜೇಸುದಾಸ್ ಅವರು ಅವರು ಭೂಮಿಕಾ ಅವರನ್ನು ಕುಂಪಲದಿಂದ ಬೋಳೂರಿನ ತಮ್ಮ ಮನೆಗೆ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ ದುರಂತ ಸಂಭವಿಸಿದೆ.
ಭೂಮಿಕಾ ಅವರು ಸಾಮ್ಯುವೆಲ್ ಮನೆಯಲ್ಲಿಯೇ ಉಳಕೊಂಡು ಸಂತ ಅಲೋಶಿಯಸ್ ಕಾಲೇಜಿಗೆ ತೆರಳುತ್ತಾ ತಮ್ಮ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು.
ಇಂದು ಮಾವನ ದ್ವಿಚಕ್ರ ವಾಹನದಲ್ಲಿ ಕುಂಪಲದಿಂದ ಬೋಳೂರು ಕಡೆಗೆ ಆಗಮಿಸುತ್ತಿದ್ದಾಗ ದುರಂತ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಲಾರಿ, ದ್ವಿಚಕ್ರ ವಾಹನಕ್ಕೆ ಬಂದು ಡಿಕ್ಕಿ ಹೊಡೆದಿದೆ.
ಡಿಕ್ಕಿ ತೀವ್ರತೆಗೆ ವಾಹನ ಲಾರಿ ಅಡಿಗೆ ನುಗ್ಗಿದ್ದು, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಕೂಟರನ್ನು ಲಾರಿ ಸುಮಾರು 10 ಮೀಟರ್ ದೂರ ಎಳೆದೊಯ್ದಿರುವುದೇ ದುರಂತದ ಭೀಕರತೆಗೆ ಸಾಕ್ಷಿಯಾಗಿದೆ.
ದುರಂತದ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿ ಸೇರಿದ್ದ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿ ಕಲ್ಲು ತೂರಾಟ ನಡೆಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಎಸಿಪಿ ಗೀತಾ ಕುಲಕರ್ಣಿ ಅವರನ್ನೂ ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಬಳಿಕ ಹೆಚ್ಚಿನ ಬಂದೋಬಸ್ತ್ ಮಾಡಿಸಲು ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಆರೋಪಿ ಲಾರಿ ಚಾಲಕ ಸತೀಶ್ ಗೌಡ ಪಾಟೀಲ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂತೂರಿನಲ್ಲಿ ಇತ್ತೀಚೆಗೆ ಸರಣಿ ಅಪಘಾತಗಳು ಸಂಭವಿಸುತ್ತಿದ್ದು, ಇದಕ್ಕೆ ಸ್ಥಳೀಯ ಪೊಲೀಸರ ದಿವ್ಯ ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮೇಲ್ಸೇತುವೆ ನಿರ್ಮಾಣಕ್ಕೆ ಇನ್ನೆಷ್ಟು ಹೆಣಗಳು ಬೀಳಬೇಕು…!!?
ನಂತೂರು ಜಂಕ್ಷನ್ ನಲ್ಲಿ ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ಕೂಡಲೇ ಮೇಲ್ಸೇತುವೆ ಕಾಮಗಾರಿಯನ್ನು ಆರಂಭಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಂತೂರು, ಕೆಪಿಟಿ ಜಂಕ್ಷನ್ ಗಳ ಕೂಡುರಸ್ತೆಗಳ ಸಂಚಾರವನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಅಲ್ಲದೇ ಈ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಕೂಡ ಜೀವ ಕೈಯಲ್ಲಿಟ್ಟು ಸಂಚಾರ ನಿಯಂತ್ರಿಸಬೇಕಾದ ಅನಿವಾರ್ಯತೆ ಇದೆ.
ವೃತ್ತಗಳಲ್ಲಿ ಸೂಕ್ತ ವ್ಯವಸ್ಥೆ ಮಾಡುವಲ್ಲಿ ಸ್ಥಳೀಯ ಆಡಳಿತ ರೂಢ ಶಾಸಕ, ಸಂಸದರು ವಿಳಂಬ ನೀತಿಯನ್ನು ಅನುಸರಿಸುತ್ತಿದ್ದರೆ, ಪ್ರತಿಪಕ್ಷದ ನಾಯಕರು ಇದು ನಮಗೆ ಸಂಬಂಧಿಸಿದ ವಿಷಯವಲ್ಲವೆಂದು ಸುಮ್ಮನೆ ಕೂತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
It’s horrible driving through Nanthoor junction.Over bridge a must.How many innocent life required to start over bridge work?