ಮಂಗಳೂರು : ಬಾಲಿವುಡ್ ನ ಐರನ್ ಮ್ಯಾನ್ ತುಳುವ ಸುನಿಲ್ ಶೆಟ್ಟಿ ಪುತ್ರ ಅಹನ್ ಶೆಟ್ಟಿ ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಹೊರಟಿದ್ದಾರೆ. ಅಹನ್ ಶೆಟ್ಟಿ ತಮ್ಮ ಚೊಚ್ಚಲ ಸಿನಿಮಾ ‘ತಡಪ್’ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
ಈ ಸಿನಿಮಾ ಇದೇ ಡಿಸೆಂಬರ್ 3ರಂದು ತೆರೆಗೆ ಬರಲಿದೆ.
ತಮ್ಮ ಪುತ್ರನ ಸಿನಿಮಾ ಪ್ರಮೋಷನ್ಗೆ ನಟ ಸುನಿಲ್ ಶೆಟ್ಟಿ ಖುದ್ದಾಗಿ ಮಂಗಳೂರಿಗೆ ಆಗಮಿಸಿ, ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಅಹನ್ ಶೆಟ್ಟಿಯೂ ತಮ್ಮ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ
.30 ವರ್ಷಗಳ ಹಿಂದೆ ನನ್ನನ್ನು ಬಾಲಿವುಡ್ಗೆ ಪರಿಚಯಿಸಿರುವ ಸಾಜಿದ್ ನಾಡಿಯಾಡ್ ವಾಲ ಅವರೇ ಇದೀಗ ನನ್ನ ಪುತ್ರ ಅಹನ್ ಶೆಟ್ಟಿಯ ‘ತಡಪ್’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
ನನಗೂ ಮೊದಲ ಚೆಕ್ ಕೊಟ್ಟ ಸಾಜಿದ್ ಅವರು ಅಹನ್ ಶೆಟ್ಟಿಯನ್ನು ಬಾಲಿವುಡ್ಗೆ ಪರಿಚಯಿಸಿದ್ದಾರೆ. ಈ ಮೂಲಕ ಓರ್ವ ನಿರ್ಮಾಪಕ ಎರಡು ತಲೆಮಾರನ್ನು ಬಾಲಿವುಡ್ಗೆ ಪರಿಚಯ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.
‘ತಡಪ್’ ಲವ್ ಸ್ಟೋರಿಯಿರುವ ಗಟ್ಟಿ ಕಥಾನಕದ ಸಿನಿಮಾ. ಡಿಸೆಂಬರ್ 3ರಂದು ಭಾರತ ಮಾತ್ರವಲ್ಲ ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದೆ. ಸಿನಿಮಾ ಕೆಲಸ ಸಾಕಷ್ಟು ಹಿಂದೆಯೇ ಪೂರ್ಣಗೊಂಡಿದ್ದರೂ, ಕೊರೊನಾ ಕಾರಣದಿಂದ ಒಂದು ವರ್ಷದ ಬಳಿಕ ಇದೀಗ ರಿಲೀಸ್ ಮಾಡುತ್ತಿದ್ದೇವೆ.ಸಿನಿಮಾ ರಿಲೀಸ್ ಮಾಡಲು ಏಕಾಏಕಿ ಒಂದು ಒಳ್ಳೆಯ ಡೇಟ್ ಸಿಕ್ಕಿದ್ದು,
ಪ್ರೊಮೋಷನ್ಗೆ ಒಂದು ತಿಂಗಳು ಮಾತ್ರ ಸಮಯ ದೊರಕಿದೆ. ನಾನು ಮುಂಬೈಯಲ್ಲಿಯೇ ನೆಲೆಸಿದ್ದರೂ ಯಾವತ್ತೂ ಕರಾವಳಿಯ ಸಂಪರ್ಕ ಕೊಂಡಿಯನ್ನು ಕಳಚಿಕೊಂಡಿಲ್ಲ.ವರ್ಷ ವರ್ಷವೂ ಕರಾವಳಿಗೆ ಬಂದು ಇಲ್ಲಿನ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿರುತ್ತೇನೆ.
ಅಲ್ಲದೆ ನಮ್ಮ ಕುಟುಂಬದ ದೈವಾರಾಧನೆ, ನಾಗಾರಾಧನೆಗಳಲ್ಲಿ ಭಾಗವಹಿಸುತ್ತಿರುತ್ತೇನೆ.
ಇದೀಗ ಅಹನ್ ಶೆಟ್ಟಿ ತಾನೂ ಈ ಸಲ ಊರಿಗೆ ಬರುತ್ತೇನೆಂದು ಹೇಳಿದ್ದರಿಂದ ಒತ್ತಡದ ನಡುವೆ ಇಂದು ಮಂಗಳೂರಿಗೆ ಆಗಮಿಸಿದ್ದೇವೆ.ಇಂದು ಸಿನಿಮಾದ ಫಸ್ಟ್ ಪ್ರಿಂಟ್ನ ಪರಿಶೀಲನೆ ಇರುವುದರಿಂದ ಇಂದು ಮತ್ತೆ ಬಾಂಬೆಗೆ ಹೊರಡುತ್ತೇವೆ ಎಂದು ಹೇಳಿದರು.
ಅಹನ್ ಶೆಟ್ಟಿಯ ಮನದ ಬಯಕೆಯಂತೆ ನಗರದ ಮುಲ್ಕಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಯ ಹಾಗೂ ಶಿಮಂತೂರು ಶ್ರೀ ಆದಿ ಜನಾರ್ದನ ದೇವರ ದರ್ಶನ ಮಾಡಿ ಬಂದಿದ್ದೇವೆ. ನನಗೆ ಬಪ್ಪನಾಡು ಶ್ರೀದುರ್ಗೆಯ ಅನುಗ್ರಹ ಸದಾ ಇತ್ತು.
ಎಂತಹ ಕಷ್ಟದ ಸಂದರ್ಭದಲ್ಲಿಯೂ ಆಕೆಯ ಅಭಯ ಯಾವತ್ತೂ ನನ್ನ ಮೇಲೆ ಇದೆ. ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಐದಾರು ವರ್ಷಗಳ ಕಾಲ ಸಿನಿಮಾದಿಂದ ದೂರ ಇದ್ದೆ.
ಇದೀಗ ಸಿನಿಮಾದತ್ತ ಮತ್ತೆ ಮುಖ ಮಾಡಿದ್ದೇನೆ.ನಾನು ಆ್ಯಕ್ಷನ್ ಹೀರೋ ಆದರೂ ತುಳುನಾಡಿನವರ ಪ್ರೋತ್ಸಾಹ ನನ್ನ ಮೊದಲ ಸಿನಿಮಾದಿಂದಲೇ ದೊರಕಿದೆ. ಇದೇ ಪ್ರೋತ್ಸಾಹ ಅಹನ್ ಶೆಟ್ಟಿ ಮೇಲೆಯೂ ಇರಲಿ ಎಂದು ಆಶಿಸುತ್ತೇನೆ ಎಂದು ಸುನಿಲ್ ಶೆಟ್ಟಿ ಹೇಳಿದರು.
ಅಹನ್ ಶೆಟ್ಟಿ ಮಾತನಾಡಿ, ನನ್ನ ಪಾತ್ರ ಉತ್ತಮವಾಗಿ ಮೂಡಿ ಬಂದಿದೆ. ನಿಜವಾಗಿಯೂ ಇಂತಹ ಪಾತ್ರವನ್ನು ನೀಡಿರುವ ನಿರ್ಮಾಪಕ ಸಾಜಿದ್, ನಿರ್ದೇಶಕ ಮಿಲನ್ ಲುಥ್ರಿಯಾ ಹಾಗೂ ಸಿನಿಮಾ ನಾಯಕಿ ತಾರಾ ಸುತಾರಿಯಾ, ಸೌರಭ್ ಶುಕ್ಲಾ, ಕುಮುದ್ ಮಿಶ್ರಾ ಎಲ್ಲರೂ ಉತ್ತಮವಾಗಿ ಅಭಿನಯಿಸಿದ್ದಾರೆ ಎಂದು ಹೇಳಿದರು.