ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ದಾರ ಮುಕ್ತಾಯದ ಹಂತ: ಆಳೆತ್ತರದ ಮರದ ದೇವಿಯ ವಿಗ್ರಹ ಶ್ರೀಕ್ಷೇತ್ರ ಪ್ರವೇಶ…
ಮಂಗಳೂರು: ಮಂಗಳೂರಿನ ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ರಮ ಮುಕ್ತಾಯದ ಹಂತದಲ್ಲಿದ್ದು,
ನೂತನವಾಗಿ ನಿರ್ಮಿಸಿದ ಆಳೆತ್ತರದ ಮರದ ದೇವಿಯ ವಿಗ್ರಹವನ್ನು ಮಾರಿಗುಡಿ ಭಂಡಾರ ಮನೆಯ ದಾರಿಯಾಗಿ ಶ್ರೀ ಕ್ಷೇತ್ರಕ್ಕೆ ತರಲಾಯಿತು.
ಕೋವಿಡ್ ನಿಬಂಧನೆಯ ಕಾರಣ ಪೂರ್ವನಿಗದಿಯಾಗಿದ್ದ ದಾರುಬಿಂಬ ಮೆರವಣಿಗೆಯನ್ನು ರದ್ದುಪಡಿಸಿ ಕರಸೇವಕರ ಮೂಲಕ ಮೂರ್ತಿಯನ್ನು ಹೊತ್ತು ತರಲಾಯಿತು. ಕ್ಷೇತ್ರದ ಮಹಿಳಾ ಭಕ್ತವೃಂದದವರು ಆರತಿ ಬೆಳಗಿ ಬಿಂಬದೇವತೆಯನ್ನು ಸ್ವಾಗತಿಸಿದರು.
ಕೊಲ್ಯ ಸುಂದರ ಆಚಾರ್ಯರ ಮಾರ್ಗದರ್ಶನದಲ್ಲಿ ತಮಿಳುನಾಡಿನ ಶಿಲ್ಪಿ ಅರಸನ್ ಈ ಬಿಂಬವನ್ನು ದೇವಳದ ಆವರಣದಲ್ಲಿಯೇ ಕೆತ್ತಿದ್ದಾರೆ.
ಚತುರ್ಭುಜ ಸಿಂಹವಾಹಿನಿ ದುರ್ಗಾ ಸ್ವರೂಪದ ದಿಗ್ವಿಜಯ ಭಂಗಿಯ ಮಾರಿಯಮ್ಮನ ಮರದ ಶಾಶ್ವತ ಬಿಂಬಪ್ರತಿಷ್ಠೆಯು,
ಮಾರಿ ಆರಾಧನೆಯಲ್ಲಿ ವಿರಳವಾಗಿದ್ದು ಬೋಳಾರದ ವಿಗ್ರಹವು ಧಾರ್ಮಿಕ ಕ್ಷೇತ್ರದ ಅಪರೂಪದ ಕಾಷ್ಠ ಶಿಲ್ಪವಾಗಿ ದಾಖಲಿಸಲ್ಪಡಲಿದೆ.
ಖ್ಯಾತ ಚಿತ್ರಗಾರ ಪೈಂಟರ್ ಉಮೇಶ್ ಬೋಳಾರ ಅವರು ಮರದ ಬಿಂಬಕ್ಕೆ ಬಣ್ಣತುಂಬುವ ಕೆಲಸವನ್ನು ಕ್ಷೇತ್ರದಲ್ಲಿಯೇ ನಡೆಸಲಿದ್ದಾರೆ ಎಂದು ಬ್ರಹ್ಮಕಲಶೊತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್ ಶೇಟ್ ತಿಳಿಸಿದ್ದಾರೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೋಳಾರ ತಾರಾನಾಥ ಶೆಟ್ಟಿ, ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ,
ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಸತೀಶ್ ಬೋಳಾರ, ಪ್ರಾಧಾನ ಅರ್ಚಕ ನಾರಾಯಣ ಭಟ್, ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ಹಾಗೂ ಸೀಮಿತ ಸಂಖ್ಯೆಯ ಭಕ್ತಾದಿಗಳು ಸರಳ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಜೂನ್ 28 ರಂದು ವಿಗ್ರಹವನ್ನು ಪ್ರತಿಷ್ಠಾಪಿಸಿ 29 ಸೋಮವಾರ ಬ್ರಹ್ಮಕಲಶ ಜರಗಲಿದೆ. ಅನ್ನಸಂತರ್ಪಣೆ ಹಾಗೂ ಉತ್ಸವ ಇರುವುದಿಲ್ಲ.
ಕೋವಿಡ್ ನಿಬಂಧನೆಗೆ ಒಳಪಡುವ ಭಕ್ತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ತಿಳಿಸಿದ್ದಾರೆ.