ಮೂಡುಬಿದಿರೆ: ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿಯಾಗಿ ಓರ್ವ ಸವಾರ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಮೂಡುಬಿದಿರೆ ಸಮೀಪದ ಕೊಡಂಗಲ್ಲುವಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಪೆರಿಂಜೆ ಸಮೀಪದ ಎದುರುಗುಡ್ಡೆ ನಿವಾಸಿ ರವೀಂದ್ರ ಪೂಜಾರಿ (35) ಮೃತ ವ್ಯಕ್ತಿ. ದ್ವಿಚಕ್ರ ವಾಹನದ ಹಿಂಬದಿಯಲ್ಲಿದ್ದ ಸಹೋದರ ರಾಜೇಂದ್ರ ಪೂಜಾರಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಲ್ಲಿ ಪರೊಟಾ ತಯಾರಿಸಿ ಅಂಗಡಿ-ಹೊಟೇಲ್ಗಳಿಗೆ ಮಾರಾಟ ಮಾಡುತ್ತಿದ್ದ ಇವರು ಇಂದು ಮೂಡುಬಿದಿರೆ ಕಡೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಸಹೋದರನೊಂದಿಗೆ ತೆರಳುತ್ತಿದ್ದ ವೇಳೆ ಕೊಡಂಗಲ್ಲು ಸಮೀಪ ಎದುರುಗಡೆಯಿಂದ ಬಂದ ಇಂಜಿನಿಯರಿಂಗ್ ವಿದ್ಯಾರ್ಥಿ ಜಸ್ಟಿನ್ ಮಿನೇಝಸ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.