ಶನಿವಾರ ಮುಂಜಾನೆ ಹೈದ್ರಾಬಾದ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವ ಪತ್ರಕರ್ತೆ ಓರ್ವಳು ದಾರುಣವಾಗಿ ಸಾವನ್ನಪ್ಪಿದ್ದಾಳೆ.
ಹೈದರಾಬಾದ್ : ಶನಿವಾರ ಮುಂಜಾನೆ ಹೈದ್ರಾಬಾದ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವ ಪತ್ರಕರ್ತೆ ಓರ್ವಳು ದಾರುಣವಾಗಿ ಸಾವನ್ನಪ್ಪಿದ್ದಾಳೆ.
ಈಟಿವಿ ಭಾರತ್ನ ಕೇರಳ ಡೆಸ್ಕ್ನ ಕಂಟೆಂಟ್ ಎಡಿಟರ್ ನಿವೇದಿತಾ ಸೂರಜ್ (26) ರಸ್ತೆ ಅಪಘಾತಕ್ಕೆ ಬಲಿಯಾದ ನತದೃಷ್ಟೆಯಾಗಿದ್ದಾರೆ.
ಹೈದರಾಬಾದ್ನ ಹಯತ್ ನಗರದ ಭಾಗ್ಯಲತಾ ಎಂಬಲ್ಲಿ ಮುಂಜಾನೆ ಸಂಭವಿಸಿದ ಕಾರು ಅಪಘಾತದಲ್ಲಿ ನಿವೇದಿತಾ ಮೃತಪಟ್ಟಿದ್ದಾರೆ.
ಶನಿವಾರ ಬೆಳಗ್ಗೆ 5 ಗಂಟೆಗೆ ಕಚೇರಿಗೆ ತೆರಳಲು ರಸ್ತೆ ದಾಟುತ್ತಿದ್ದಾಗ ಎಲ್ ಬಿ ನಗರದಿಂದ ಹಯತ್ ನಗರಕ್ಕೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ನಿವೇದಿತಾ ಸೂರಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಜೊತೆಯಲ್ಲಿದ್ದ ಈಟಿವಿ ಭಾರತ್ ಉತ್ತರ ಪ್ರದೇಶ ಡೆಸ್ಕ್ನ ಮಹಾರಾಷ್ಟ್ರ ಮೂಲದ ಸೋನಾಲಿ ಚಾವ್ರೆ ಅವರು ಗಂಭೀರವಾಗಿ ಗಾಯಗೊಂಡಿದ್ದು, ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸದ್ಯ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಹಯತ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಿವೇದಿತಾ 2021ರ ಮೇ ತಿಂಗಳಲ್ಲಿ ಈಟಿವಿ ಭಾರತ್ಗೆ ಕಂಟೆಂಟ್ ಎಡಿಟರ್ ಆಗಿ ಸೇವೆಗೆ ಸೇರಿದ್ದರು.
ಈ ಹಿಂದೆ ನಿವೇದಿತಾ ರಿಪೋರ್ಟರ್ ಟಿವಿಯ ತ್ರಿಶೂರ್ ಬ್ಯೂರೋದಲ್ಲಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದರು.
ಮರಣೋತ್ತರ ಪರೀಕ್ಷೆಯ ನಂತರ ನಿವೇದಿತಾ ಅವರ ಮೃತದೇಹವನ್ನು ತ್ರಿಶೂರ್ನಲ್ಲಿರುವ ಅವರ ಮನೆಗೆ ತರಲಾಗಿದೆ.
ನಿವೇದಿತಾ ತ್ರಿಶೂರ್ ಜಿಲ್ಲೆಯ ಪಡಿಯೂರಿನಲ್ಲಿ ನೆಲೆಸಿರುವ ಸೂರಜ್ ಮತ್ತು ಬಿಂದು ದಂಪತಿಯ ಪುತ್ರಿಯಾಗಿದ್ದಾರೆ. ತಂದೆ, ತಾಯಿ ಹಾಗೂ ಸೋದರ ಶಿವಪ್ರಸಾದ್ ಅವರನ್ನು ನಿವೇದಿತಾ ಅಗಲಿದ್ದಾರೆ.