ಬೆಳಗಾವಿ: ಮೂವರು ಹೆಂಡತಿಯರನ್ನು ಮದುವೆಯಾಗಿ ರಾಜನಂತೆ ದಿನ ವೈಭೋಗದಲ್ಲಿ ದಿನಕಳೆಯುತ್ತಿದ್ದ ವ್ಯಕ್ತಿಯೋರ್ವ ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮೂವರು ಹೆಂಡತಿಯರೊಂದಿಗೆ ಸುಖವಾಗಿ ದಿನದೂಡುತ್ತಿದ್ದ ವ್ಯಕ್ತಿ ಏಕಾಏಕಿ ಹೀಗೆ ಕೊಲೆಯಾದ ಕಾರಣ ತಿಳಿಯಲು ಹೊರಟ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ರಾಜು ಮಲ್ಲಪ್ಪ ದೊಡ್ಡಬಣ್ಣವರ್(45) ಎಂದು ಗುರುತಿಸಲಾಗಿದೆ.
ರಾಜು ಮೂರು ಜನರನ್ನ ಮದುವೆಯಾಗಿದ್ದ.
ಹಾಗಂತ ಯಾರಿಗೂ ವಿಚ್ಛೇದನ ಕೂಡ ನೀಡಿಲ್ಲ. ಮದುವೆಯಾದ ವಿಚಾರ ಎಲ್ಲರಿಗೂ ತಿಳಿದಿತ್ತು. ರಾಜು ಮಂಗಳವಾರ ಭವಾನಿ ನಗರದ ಮನೆಯಿಂದ ಎಂದಿನಂತೆ ಬೆಳಗ್ಗೆ ಆರು ಗಂಟೆಗೆ ವಾಕಿಂಗ್ಗೆ ತೆರಳಿದ್ದಾರೆ. ಈ ವೇಳೆ, ಎರಡನೇ ಹೆಂಡತಿಗೆ ಫೋನ್ ಕರೆ ಮಾಡಿದ್ದಾರೆ. ಆದರೆ, ಫೋನ್ ತಗೆದಿಲ್ಲ ಅನ್ನೋ ಕಾರಣಕ್ಕೆ ಒಬ್ಬರೇ ವಾಕ್ ಮಾಡಲು ಹೊರಟ್ಟಿದ್ದಾರೆ.
ಮನೆಯಿಂದ ಒಂದು ಕಿಮೀ ಹೋಗುವಷ್ಟರಲ್ಲಿ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ರಾಜು ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ಆತ ಕಾರು ಇಳಿಯುತ್ತಿದ್ದಂತೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ, ದುಷ್ಕರ್ಮಿಗಳು ರಾಜುವಿಗೆ ಹದಿನಾರು ಬಾರಿ ಇರಿದು ಪರಾರಿ ಆಗಿದ್ದಾರೆ. ತೀವ್ರ ಗಾಯಗೊಂಡಿದ್ದ ರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಾಕಿಂಗ್ ಮಾಡುತ್ತಿದ್ದ ಕೆಲವರು ರಸ್ತೆಯಲ್ಲಿ ಶವ ಬಿದ್ದಿದ್ದನ್ನು ಗಮನಿಸಿ ಬೆಳಗಾವಿ ಗ್ರಾಮೀಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಇತ್ತ ಡಿಸಿಪಿ ರವೀಂದ್ರ ಗಡಾದಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಶವವನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.
ರಾಜು 22ವರ್ಷದ ಹಿಂದೆ ಉಮಾ ಎಂಬುವರನ್ನು ಮದುವೆಯಾಗಿದ್ದ. ಎರಡು ಮಕ್ಕಳಿದ್ದು, ಇಬ್ಬರಿಗೂ ವೈದ್ಯಕೀಯ ಶಿಕ್ಷಣ ಓದಿಸುತ್ತಿದ್ದಾರೆ.
ಆದರೆ, ನಾಲ್ಕು ವರ್ಷದ ಹಿಂದೆ ಮೊದಲ ಹೆಂಡತಿ ತನ್ನ ಮಕ್ಕಳನ್ನ ಇವರ ಬಳಿ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದರು. ಇತ್ತ ಎಂಟು ವರ್ಷದ ಹಿಂದೆ ಮಹಾರಾಷ್ಟ್ರದ ಲಾತೂರ್ನ ಕಿರಣಾ ಎಂಬುವಳನ್ನೂ ರಾಜು ಮದುವೆಯಾಗಿದ್ದ. ಅವರಿಗೂ ಎರಡು ಮಕ್ಕಳಿವೆ.
ಇದಾದ ಬಳಿಕ ಒಂದು ವರ್ಷದ ಹಿಂದೆ ಹಳಿಯಾಳ ತಾಲೂಕಿನ ದೀಪಾಳನ್ನ ಕಟ್ಟಿಕೊಂಡಿದ್ದರು. ಆಕೆಯೂ ಇದೀಗ ಮೂರು ತಿಂಗಳ ಗರ್ಭಿಣಿ. ಹೀಗೆ ಮೂರು ಹೆಂಡತಿಯರನ್ನು ಒಂದೊಂದು ಕಡೆ ಇಟ್ಟು ರಾಜನಂತೆ ಜೀವನ ಸಾಗಿಸುತ್ತಿದ್ದ ರಾಜು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು.
ನಾಲ್ಕು ಅಪಾರ್ಟ್ಮೆಂಟ್ ಕೆಲಸ ಕೂಡ ಪ್ರಗತಿಯಲ್ಲಿದ್ವಂತೆ.ಆದರೆ, ಎಲ್ಲರ ಬಳಿ ಹಣ ಪಡೆದು ಸಿಕ್ಕಂತೆ ಖರ್ಚು ಮಾಡಿದ್ದನಂತೆ ಈ ರಾಜು. ವ್ಯವಹಾರ ವಿಚಾರದ ಕುರಿತು ಕೆಲ ದಿನಗಳ ಹಿಂದೆ ನಾಲ್ಕು ಜನರು ಮನೆವರೆಗೂ ಹುಡುಕಿಕೊಂಡು ಬಂದಿದ್ದರಂತೆ.
ಆಗ ಸೆಕ್ಯುರಿಟಿ ಗಾರ್ಡ್ ಬಿಟ್ಟಿರಲಿಲ್ಲ. ಈ ವಿಚಾರ ಗೊತ್ತಾಗಿ ರಾಜುನೇ ಅವರಿಗೆ ಭೇಟಿಯಾಗಿ ವ್ಯವಹಾರದ ಬಗ್ಗೆ ಮಾತನಾಡಿದ್ದ. ಇದಾದ ಬಳಿಕ ಮಂಗಳವಾರ ಬೆಳಗ್ಗೆ ರಾಜು ಹತ್ಯೆಯಾಗಿದೆ.
ಸದ್ಯ ಎರಡು ಆಯಾಮದಲ್ಲಿ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಮೂರು ಜನ ಹೆಂಡತಿಯರನ್ನ ಮದುವೆಯಾಗಿ ಎಲ್ಲರನ್ನ ನಿಭಾಯಿಸುತ್ತಿದ್ದ ರಾಜು ಬರ್ಬರವಾಗಿ ಹತ್ಯೆಯಾಗಿದ್ದರಿಂದ ಮುರೂ ಜನ ಹೆಂಡತಿಯರು ಮತ್ತು ಮಕ್ಕಳು ಬೀದಿಗೆ ಬಂದಿದ್ದಾರೆ. ಇತ್ತ ಸಾಲ ಸೋಲ ಮಾಡಿ ಅಪಾರ್ಟ್ಮೆಂಟ್ ಕೊಳ್ಳಲು ಹಣ ಹೂಡಿದ ಜನರು ಕೂಡ ಬೀದಿಗೆ ಬಂದಿದ್ದು,
ದಿಕ್ಕೆ ತೋಚದ ಸ್ಥಿತಿಯಲ್ಲಿದ್ದಾರೆ. ಈ ಕೊಲೆ ಯಾಕೆ ಮಾಡಿದ್ರೂ ಅನ್ನೋ ಸತ್ಯಾಂಶ ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ.