ಕಾರ್ಕಳ: ವ್ಯಕ್ತಿಯ ಅಪಹರಣ ಹಾಗೂ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿಗಳನ್ನು ಹೊಳೆನರಸೀಪುರದಲ್ಲಿ ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.
ಯೋಗಿಶ, ಮಂಜುನಾಥ್, ವಸಂತ ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ
2007ರ ಅ.14 ರಂದು ಆರೋಪಿಗಳು ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮೂರೂರು ಪೋಸ್ಟ್ ಆಫೀಸ್ ಬಳಿ ಕುಕ್ಕುಂದೂರು ಗ್ರಾಮದ ವೆಂಕಟೇಶ್ ಎಂಬವರನ್ನು ಅಪಹರಿಸಿ ಕೊಂಡು ಹೋಗಿ ಆರೋಪಿ ಯೋಗೀಶನ ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟಿದ್ದರು.
ಮಾತ್ರವಲ್ಲದೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿ ಯೋಗೀಶನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಡಿಸಿದ್ದರು.
ಉಳಿದ ಆರೋಪಿಗಳಾದ ಮಂಜುನಾಥ ಮತ್ತು ವಸಂತ ಪ್ರಕರಣ ದಾಖಲಾದ ದಿನದಿಂದ ತಲೆಮರೆಸಿಕೊಂಡಿದ್ದು, ಪ್ರಕರಣದ ಆರೋಪಿಗಳ ಬಂಧನಕ್ಕೆ ನ್ಯಾಯಾಲಯವು ಎಲ್ ಪಿಸಿ ವಾರಂಟ್ ಹೊರಡಿಸಿತ್ತು.
ಈ ನಡುವೆ ಆರೋಪಿಗಳು ಹೊಳೆನರಸೀಪುರದಲ್ಲಿವರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕಾರ್ಕಳ ಉಪ-ವಿಭಾಗದ ಡಿ ವೈಎಸ್ಪಿ ವಿಜಯಪ್ರಸಾದ್,
ಕಾರ್ಕಳ ಸರ್ಕಲ್ ಇನ್ಸ್ಪೆಕ್ಟರ್ ಸಂಪತ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಪೊಲೀಸ್ ಠಾಣಾ ಪಿಎಸ್ ಐ ಮಧು ಬಿ ಇ ರವರ ಆದೇಶದಂತೆ ಠಾಣಾ ಎ ಎಸ್ ಐ ರಾಜೇಶ್ ಪಿ,
ಪ್ರೋಬೇಶನರಿ ಪಿ ಎಸ್ ಐ ಮಹೇಶ್ ಕಂಬಿ, ಪಿ ಸಿ ಘನಶ್ಯಾಮ್ ಅವಯ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶ ಹೊರಡಿಸಿದೆ.